ಚಂದಿರನ ಅನ್ವೇಷಣೆ
ನಿಲ್ಲು ನೀರೆ ಆಡದೆ ಕಾಣಲಿ ಚಂದದ ಚಂದಿರ, ಬೀಸುವ ತಂಗಾಳಿಯ ಸ್ಪರ್ಶಕೆ ಕಲಕದಿರು ಬಿಂಬವ. ಮೂಡಿದ ಭಾವನೆಯೊಂದು ಮನದಿ, ಕೆದಕ ಹೊರಟಿದೆ ಮನಸ ಮಗನ ನಿನ್ನ ಮೊಗದಲಿ, ಬೇಡುವೆನು ನಿನ್ನ, ನಿಂತು ಸಹಕರಿಸು ಮತ್ತೆ ಆಡದೆ ಆ ತಂಗಾಳಿಯ ಸುಖಸ್ಪರ್ಶಕೆ ನೋಡುವ ಹಂಬಲ ಚೆಂದಿರನ ಚೆಲುವ ಕಣ್ತುಂಬಿಕೊಳ್ಳುವ ಹಂಬಲ ಆ ಕಾಂತಿಯ, ಅನುಭವಿಸುವ ಹಂಬಲ ಆ ಹಾಲ ಬೆಳಕ ಸ್ಪರ್ಶಿಸುವ ಹಂಬಲ ಆ ತಿಳಿಗಾಳಿಯ. ನಿನ್ನ ಮೊಗವದೋ ನನಗೆ ದರ್ಪಣದಂತಿರಲಿ ನಿನ್ನ ಆವರಿಸಿದೆ ಬೆಳದಿಂಗಳ ಬೆಳಕು, ಕಂಡ ಚೆಂದಿರನ ಬಿಂಬಿಸೆನ್ನನು ನನಗೆ, ತಂಗಾಳಿಗು ಓಲದೆ,ಬಿರುಗಾಳಿಗು ಜಗ್ಗದೆ. ಸುತ್ತ ಕವಿದಿದೆ ಕಡುಗತ್ತಲು ಜೊತೆಗೆ ಬೆರೆತಿದೆ ಆ ತಿಳಿಬೆಳಕು, ಸಹಕರಿಸು ನಿನ್ನ ಚಂಚಲತೆಯ ಬಿಟ್ಟು ದಾರಿ ದೀಪವು ನಿನ್ನ ಮೊಗವದೋ ನನಗೆ. ನಿಲ್ಲು ನೀರೆ ಆಡದೆ ಕಾಣಲಿ ಚಂದದ ಚೆಂದಿರ, ಬೀಸುವ ತಂಗಾಳಿಯ ಸ್ಪರ್ಶಕೆ ಕಲಕದಿರು ಬಿಂಬವ. (ಮನಸ ಮಗ:- ನಮ್ಮ ಪುರಾಣಗಳ ಪ್ರಕಾರ ಚಂದಿರನನ್ನು ಶ್ರೀ ಮಹಾವಿಷ್ಣುವಿನ ಮುಖದಿಂದ ಹುಟ್ಟಿದವನೆಂದು ಹೇಳುತ್ತವೆ ಅದನ್ನು ಇಲ್ಲಿ ಉತ್ಪ್ರೇಕ್ಷೆಯಾಗಿ ಬಳಸಿದ್ದೇನೆ)