ನಾ ಕಂಡ ಸತ್ಯ

ಒಂದು ತಿಂಗಳ ಹಿಂದೆ ವೈಟ್ ಫೀಲ್ಡ್ ಎಸ್.ಜೆ.ಆರ್ ಮುಂದೆ ಒಂದಷ್ಟು ಜನ ನವಯುವಕರು  ಹೋಗೋ ಬರೋರಿಗೆಲ್ಲಾ ಏನೋ ಹೇಳ್ತಾ ನಿಂತಿದ್ದರು. ಅದರ ಮುಂದೆನೇ ಹೋಗುತ್ತಿದ್ದ ನನ್ನನ್ನು ಕರೆದರು. ಯಾವ ಬ್ಯಾಂಕನೋರೋ ಲೋನ್ಗೆ ಕರಿತಿರಬೇಕು ಅಂತ ತಿಳ್ಕೊಂಡೆ. ನೋಡಿದ್ರೆ ಅವರುಗಳು ಒಂದು ಎನ್.ಜಿ.ಓ ಸಂಸ್ಥೆಯಿಂದ ಬಂದವರಾಗಿದ್ದರು. ಅದರಲ್ಲಿದ್ದವನೊಬ್ಬ ನನ್ನ ಕರೆದು. "ನೋಡಿ ಭಾರತದಲ್ಲಿ ಅತ್ಯಾಚಾರ ಜಾಸ್ತಿ ಆಗ್ತಿದಾವೆ. ಅದರ ಬಗ್ಗೆ ಅರಿವು ಮೂಡಿಸೋಕೆ ನಾವು ಬಂದಿರೋದು. ಈಗ ಮೊನ್ನೆ ಮೊನ್ನೆ ಸ್ಕೂಲ್ ಮಗುಮೇಲೆ ಪ್ರಕರಣ ಆಯ್ತು ಇವೆಲ್ಲಾ ಭಾರತದಲ್ಲಿ ಹೆಚ್ಚಾಗುತ್ತಿದೆ ಅದಕ್ಕೆ ನಾವು ಜನರನ್ನ "ಎಜ್ಯುಕೇಟ್ " ಮಾಡಬೇಕು." ಹಂಗೆ ಹಿಂಗೆ ಅಂದ. ಅವನ ಮಾತನ್ನ ತಾಳ್ಮೆಯಿಂದ ಕೇಳಿದ ನಂತರ ಅವನಿಗೆ ಉತ್ತರಿಸಲು ಹೊರಟೆ. ಅದು ಒಂದು ಘಂಟೆಗಳ ಸುದೀರ್ಘ ಚರ್ಚೆಯಾಗಿತ್ತು ಆ ಪಾದಾಚಾರಿ ಮಾರ್ಗದಲ್ಲಿ. ಹಿಂದುವಿನಿಂದ ಮುಸ್ಲಿಂ ಮಥಕ್ಕೆ ಕನವರ್ಟ್, ಆದವನೋಂದಿಗೆ ದೊಡ್ಡವಾದವೇ ನೆಡೀತು. ಅಲ್ಲಿ ಬಂದ ಹಲವಾರು ಪ್ರಶ್ನೆಗಳಿಗೆ ನನ್ನ ಚಿಂತನೆ,ನನ್ನ ಆದರ್ಶದಿಂದ ನೀಡಿದ ಉತ್ತರಗಳನ್ನು ನಿಮ್ಮೊಂದಿಗೆ ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ.

ಎಸ್ ನಾವೆಲ್ಲಾ ನಾಗರೀಕ ಸಮಾಜದಲ್ಲಿದ್ದೇವೆ. ಎಸ್ ನಾವೆಲ್ಲಾ ಎಜ್ಯುಕೇಟೆಡ್. ಆದರೂ ಈ ಅತ್ಯಾಚಾರವೇನು? ಈ ಮೃಗೀಯ ವರ್ತನೆ ಏಕೆ? ಒಂದು ಸೋ ಕಾಲ್ಡ್ ನಾಗರೀಕ,ಎಜ್ಯುಕೇಟೆಡ್ ಸಮಾಜದಲ್ಲಿ ಈ ರೀತಿಯಾಗಿ ಒಂದು ಹೆಣ್ಣನ್ನ ನೆಡೆಸಿಕೊಳ್ಳುತ್ತಿರುವ ರೀತಿ ಸರಿಯೇ? ಹಾಗಾದರೆ ನಮಗೆ ಸಿಕ್ಕಿರುವ ಎಜ್ಯುಕೇಷನ್ ನಮ್ಮನ್ನ ಮೃಗವನ್ನಾಗಿ ಮಾಡಿವೆಯೇ?
ಹಾಗದರೆ ಇವಕ್ಕೆಲ್ಲ ಎಂದು ಮುಕ್ತಿ? ಎಂದು ಈ ಅತ್ಯಾಚಾರ ಕೊನೆಗೊಳ್ಳುವುದು? ಜಗತ್ತಿಗೇ ಒಳಿತನ್ನು ಬಯಸುವ ಮಹಾನ್ ದೇಶ ಭಾರತದಲ್ಲೇಕೆ ಈ ನಡತೆ? ಎನ್ನಿಸುವುದಿಲ್ಲವೇ? 

ಹೌದು ಈ ವಿದ್ಯಾಭ್ಯಾಸ ಅನ್ನೋದು ಕೇವಲ ದುಡ್ಡು ಸಂಪಾದಿಸುವ ದಾರಿಯಲ್ಲ. ಅದಕ್ಕಿಂತ ಮಿಗಿಲಾಗಿ ಇದು ಒಬ್ಬ ಪರಿಪೂರ್ಣ ಮನುಷ್ಯನನ್ನ ರೂಪಿಸಲು ಈತನ ಮೂಲಕ ಒಂದು ಸದೃಢ ಸಮಾಜವನ್ನು ಹಾಗು ಈ ಸಮಾಜದಿಂದ ಒಂದು ಸುಸಂಸ್ಕೃತ ದೇಶವನ್ನು ರೂಪಿಸುವ ಒಂದು ಮಾಹಾನ್ ಸೇವೆಯಾದಾಗ ಮಾತ್ರ ನಾವು ಒಂದು ನಾಗರಿಕ ವಾತಾವರಣವನ್ನ ನಮ್ಮ ಸುತ್ತಮುತ್ತಲೂ ನೋಡಬಹುದು. ಆದರೆ ಈಗಿನ ವಿದ್ಯಾಭ್ಯಾಸ ಒಬ್ಬ ಮನುಷ್ಯನಲ್ಲಿ ಸ್ವಾರ್ಥ,ಕಾಮ,ಲೋಭ ಇವುಗಳನ್ನ ಹೆಚ್ಚಿಸುವಲ್ಲಿ ಸಕ್ರೀಯವಾಗಿ ಕೆಲಸಮಾಡುತ್ತಿದೆ. ಒಂದು ಮಗು ಹುಟ್ಟಿದಾಗ ತಾಯಿಯ ಎದೆಹಾಲು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆ ಮಗುವಿಗೆ ಆ ಕ್ಷಣದಿಂದ ತಾಯಿ ಕೊಡುವ ಸಂಸ್ಕಾರ. ಜಾನಪದರಲ್ಲಿ ಒಂದು ನಂಬಿಕೆ ಇದೆ ಎದೆ ಹಾಲು ಕುಡಿಯುವಾಗ ಆ ತಾಯಿ ಒಳ್ಳೇದನ್ನೇ ಯೋಚಿಸುತ್ತಿರಬೇಕು ಅಂತ ಇಲ್ಲದಿದ್ದರೆ ಆ ಮಗುವಿಗೆ ಆ ತಾಯಿ ಮಾಡುವ ಕೆಟ್ಟ ಯೊಚನೆಗಳು ಬರುತ್ತವೆ ಎಂದು. ಆದ್ದರಿಂದ ಒಂದು ಮಗು ದೈಹಿಕವಾಗಿ ಬೆಳೆಯುವಾಗ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತಂದೇ ತಾಯಿಯರು ನೀಡುವ ಸಂಸ್ಕಾರ ಹಾಗು ಸಂಸ್ಕೃತಿ. ಆದ್ದರಿಂದಲೇ ಹೇಳೋದು "ಮನೆಯೇ ಮೊದಲ ಪಾಠಶಾಲೆ" ಎಂದು.

ಈಗಿನ ಭಾರತೀಯರ ಸಮಾಜದಲ್ಲಿ ಈ ಮನೆಯಿಂದ ಎರವಲು ಬರುವ ಸಂಸ್ಕೃತಿ ಕಡಿಮೆ ಆಗತೊಡಗಿದೆ. ಕಾರಣ ವಿಭಕ್ತ ಕುಟುಂಬಗಳು,ತಂದೆ ತಾಯಿಯರ ಕೆಲಸದ ವತ್ತಡ ಇನ್ನೂ ಅನೇಕ. ಯಾವಾಗ ಒಂದು ವಕ್ತಿ ವ್ಯಕ್ತಿತ್ವವಿಲ್ಲದೇ ಬೆಳೆಯುತ್ತಾನೋ ಆಗ ಬುಟ್ಟಿಯಲ್ಲಿರುವ ಒಂದು ಕೊಳೆತ ಮಾವಿನ ಹಣ್ಣು ಉಳಿದ ಹಣ್ಣುಗಳನ್ನೂ ಕೊಳೆಯುವಂತೆ ಮಾಡುವ ಹಾಗೆ. ಆ ಒಬ್ಬನಿಂದ ಒಂದು ಸಮಾಜ ಅನಾಗರೀಕವಾಗುತ್ತದೆ. ನಾನು ಇಲ್ಲಿ ಮಾತನಾಡುತ್ತಿರುವುದು ವಿದೇಶಿಗರ ವ್ಯಾಖ್ಯಾನದ ಅನಾಗರೀಕ ಅರ್ಥದಿಂದಲ್ಲ, ಭಾರತೀಯರ ವ್ಯಾಖ್ಯಾನದಿಂದ. ಈ ಅನಾಗರೀಕ ಅನ್ನುವ ಪದಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ವ್ಯಾಖ್ಯಾನವಿದೆ. ಆದರೆ ಭಾರತೀಯರ ಪ್ರಕಾರವಾಗಿ ಅನಾಗರಿಕವೆಂದರೆ ಶಿಷ್ಟಾಚಾರ,ಸಂಸ್ಕೃತಿಯ ಮೀರುವಿಕೆಯೇ ಅನಾಗರಿಕ ವರ್ತನೆ. ಯಾವಾಗ ಈ ಶಿಷ್ಟಾಚಾರ ಮತ್ತು ಸಂಸ್ಕೃತಿಯ ಅರಿವು ಇಲ್ಲದೆ ಒಂದು ವ್ಯಕ್ತಿತ್ವ ಈ ಸಮಾಜದಲ್ಲಿ ರೂಪುಗೊಳ್ಳುತ್ತದೋ ಆಗ ಆ ಒಂದು ಅನಾಗರೀಕ ವ್ಯಕ್ತಿತ್ವ ಉಳಿದ ನೂರು ನಾಗರೀಕ ವ್ಯಕ್ತಿತ್ವಗಳ ನಾಶಕ್ಕೆ ನಾಂದಿ ಹಾಡುತ್ತದೆ ಈ ಮೂಲಕ ಒಂದು ಸಮಾಜದ ನಾಶಕ್ಕೆ ಕಾರಣವಾಗುತ್ತದೆ.

ಈಗಿನ ಭಾರತದಲ್ಲಿ ನಡೆಯುತ್ತಿರುವುದೂ ಈ ಅನಾಗರೀಕ ಮೃಗೀಯ ವರ್ತನೆಯೇ. ಹಾಗಾದರೆ ವಿದೇಶಗಳಲ್ಲಿ ಈ ರೀತಿಯ ವರ್ತನೆ ಯಾಕೆ ಇಲ್ಲ ಎಂಬ ಪ್ರಶ್ನೆಯ ಉದ್ಭವ ಸಹಜ. ಈ ವಿದೇಶಿಗರಲ್ಲಿ ನಾವುಗಳು ಹೆಚ್ಚಾಗಿ ಸ್ವೇಛ್ಛಾಚ್ಚಾರ ನೋಡಬಹುದು. ಹದಿನಾಲ್ಕು ವರ್ಷಕ್ಕೆಲ್ಲಾ ಅಲ್ಲಿ ಸ್ವತಂತ್ರ್ಯತೆ ಸಿಗುತ್ತದೆ. ಯಾವ ವಯಸ್ಸಿನಲ್ಲಿ ಮಾರ್ಗದರ್ಶನ,ಅಂಕುಶದ ಮಹತ್ವವಿರುತ್ತದೋ ಆ ವಯಸ್ಸಿನಲ್ಲಿ ಸ್ವತಂತ್ರ್ಯ ಸಿಗುತ್ತದೆ ಅದು ಸ್ವೇಛ್ಛಾಚ್ಚಾರಕ್ಕೆ ಪುಷ್ಠಿ ಕೊಡುತ್ತದೆ ತನ್ಮೂಲಕ ಅಲ್ಲಿ ಮನದ ಆಸೆಗಳು ಲಗಾಮಿಲ್ಲದೆ ಹುಚ್ಚುಕುದುರೆಯ ತರಹ ಓಡುತ್ತದೆ. ಈ ಕಾರಣದಿಂದ ವಿದೇಶಿಗರಿಗೆ ಈ “ಶೀಲ” ಎಂಬುದರ ಮೇಲೆ ಯಾವರೀತಿಯ ಮಹತ್ವ ಕೂಡ ಇರುವುದಿಲ್ಲ. ಆದ್ದರಿಂದ ಅವರುಗಳಿಗೆ ಅವೆಲ್ಲಾ ಭೋಗದ ಒಂದು ವಿಧಾನವೇ ಆಗಿರುತ್ತದೆ. ಆದರೆ ಈ ಅಪ್ ಗ್ರೇಡೆಡ್ ಭಾರತೀಯರ ವಿಷಯ ಭಿನ್ನವೇ ಆಗಿದೆ. ಇವರುಗಳು ಪೂರ್ತಿಯಾಗಿ ಭಾರತದ ನಾಗರೀಕರೂ ಆಗಿಲ್ಲ ಅಥವಾ ಪೂರ್ತಿಯಾಗಿ ವಿದೇಶಿಗರೂ ಆಗಿಲ್ಲ. ಈಗಿನ ಯುವಜನತೆಗೆ ವಿದೇಶೀ ಸಂಸ್ಕೃತಿಯ ವ್ಯಾಮೋಹವೂ ಉಂಟು, ಇತ್ತ ಭಾರತೀಯರ ಸಂವೇದನೆ ಕೂಡ ಉಂಟು. ಈ ಎರಡೂ ಎಂದೂ ಸೇರದ ಬೇರೆ ಬೇರೆ ಮಾರ್ಗಗಳು. ಆ ಎಂದೂ ಸೇರದ ಬೇರೆ ಬೇರೆ ಮಾರ್ಗಗಳಲ್ಲಿ ಒಂದೊಂದು ಕಾಲು ಇಟ್ಟು ನೆಡೆಯುವ ಭಾರತೀರಯಿರಿಗೆ ಈ ರೀತಿಯ ಮೃಗೀಯ ಶೋಷಣೆಗಳು ಸಹಜ. ಇದಕ್ಕೆಲ್ಲಾ ಒಂದೇ ದಾರಿ ಅದು ಎರಡು ದಾರಿಗಳಲ್ಲಿ ಒಂದನ್ನ ಆರಿಸುವುದು.

ಇನ್ನು ಮುಂದಿನ ಪ್ರಶ್ನೆ ನಾನು ವಯಕ್ತಿಕವಾಗಿ ಏನಾದರೂ ಮಾಡುವೆ ಅದರಿಂದ ಸಮಾಜಕ್ಕೇನು ತೊಂದರೆ? ಎಂಬ ವಿತಂಡವಾದದ ಪ್ರಶ್ನೆ. ಹೇಗೆ ನಮ್ಮ ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೆ ಆ ನೋವನ್ನ ಇಡೀ ದೇಹವೇ ಅನುಭವಿಸುತ್ತದೋ ಹಾಗೆ ಈ ಸಮಾಜದ ಅಂಗಗಳೇ ನಾಗರೀಕರು. ಇಲ್ಲಿ ಒಂದು ಅಂಗಕ್ಕೆ ತೊಂದರೆಯಾದರೂ ಅದರ ಪರಿಣಾಮ ಇಡೀ ಸಮಾಜಕ್ಕೇ ಆಗುತ್ತದೆ. ಉದಾಹರಣೆಗೆ ಈ ಯುವಜನತೆ ಬಾರ್, ಪಬ್ ಗಳ ಸಂಪ್ರದಾಯವನ್ನ ಅನುಸರಿಸುತ್ತಾರೆ, ಇದನ್ನ ಅನುಸರಿಸಲಾಗದ ಬಡವರು ಶೇಂದಿ,ಬಟ್ಟಿ ಸರಾಯಿಗಳ ದಾಸರಾಗುತ್ತಾರೆ. ಇದರಿಂದ ಎಷ್ಟು ಸಾವು ನೋವುಗಳು ಆಯ್ತು ಎಂಬುದಕ್ಕೆ ನಿದರ್ಶನಗಳು ನಮ್ಮ ಇಂದಿನ ತನಕದ ಇತಿಹಾಸದಲ್ಲಿ ತುಂಬಾ ಇವೆ. ಇನ್ನೊಂದು “ಲಿವಿಂಗ್ ಟುಗೆದರ್” ಎಂಬ ಶ್ರೀಮಂತ ಹಾದರ. ಈ ಆಚರಣೆಗಳ ರೀತಿ ಬೇರೆ ಬೇರೆಯೇ ಇರಬಹುದು ಅದರೆ ಇದರ ಅರ್ಥ ಮತ್ತು ವ್ಯಾಖ್ಯಾನ ಒಂದೇ ಆಗಿರುತ್ತದೆ.


ಆದ್ದರಿಂದ ಪ್ರಸ್ತುತ ಭಾರತದಲ್ಲಿ ಈಗ ನೆಡೆಯುತ್ತಿರುವುದು ಭಾರತೀಯ ಸಂಸ್ಕೃತಿಯ ಸೋಲಲ್ಲ ಹೆಚ್ಚಾಗಿ ವಿದೇಶಿ ಸಂಸ್ಕೃತಿಯ ಆಚರಣೆಯ ಫಲವಾಗಿರುತ್ತದೆ. ಯಾವಾಗ ಆ ವಿದೇಶಿ ಸಂಸ್ಕೃತಿಗಳ ದಾಸರಾಗುತ್ತೇವೋ ಅಲ್ಲಿನ ಆಚರೆಣೆಗಳೂ ಮನೋಭಾವಗಳನ್ನೂ ಕೂಡ ಒಪ್ಪಿಕೊಳ್ಳಲೇ ಬೇಕು ಇದು ಅನಿವಾರ್ಯ. ಈ ಅನಾಗರೀಕ ವರ್ತನೆಗಳು ಯಾವ ಸತ್ಯಾಗ್ರಹದಿಂದಾಗಲಿ, ಯಾವ ವಿದ್ಯಾಭ್ಯಾಸದಿಂದಾಗಲೀ ನಿವಾರಣೆಯಾಗದು ಇದು ಕೇವಲ ಭಾರತೀಯ ಸಂಸ್ಕೃತಿಯ ಮಾರ್ಗ ಅಥವಾ ವಿದೇಶೀ ಸಂಸ್ಕೃತಿಯ ಮಾರ್ಗಗಳ ಪೂರ್ತಿ ಆಯ್ಕೆ ಮತ್ತು ಪೂರ್ತ ಶರಣಾಗತಿಯಿಂದ ಮಾತ್ರವೇ ಸಾದ್ಯ.

ಈ ರೀತಿಯ ನನ್ನ ಎಲ್ಲಾ ವಾದಗಳನ್ನ ಅವರುಗಳ ಮುಂದಿಟ್ಟಮೇಲೆ. ಕೊನೆಗೆ ಒಂದು ಪ್ರಶ್ನೆಯನ್ನ ನಾನೇ ಆ ಪೂರ್ವಾಶ್ರಮದ ಹಿಂದುವಿಗೆ ಕೇಳಿದೆ. “ಒಬ್ಬ ಯುವಕ ಚಿಕ್ಕ ಚೆಡ್ಡಿ ಸ್ಲೀವ್ ಲೆಸ್ ಶರ್ಟ ಹಾಕೊಂಡ್ರೆ ಯಾರೂ ಕೇಳೋರು ಇರೋದಿಲ್ಲ ಅದೇ ಒಬ್ಬ ಯುವತಿ ಹಾಕಿಕೊಂಡರೆ ಅವಳನ್ನ ಸುತ್ತ ಇದ್ದ ಅಷ್ಟೂ ಕಣ್ಣುಗಳೂ ನೋಡುತ್ತವೆ ಯಾಕೆ” ಎಂದೆ. ಉತ್ತರ ಹೇಳಲಾಗದ ಆತನಿಗೆ ಕೊನೆಗೆ ನಾನೇ ಹೇಳಿದೆ “ಇದರ ಉತ್ತರ ತಿಳ್ಕೊಂಡ್ರೆ ಮತ್ತೆ ಹಿಂದುವಾಗ್ತಿ” ಎಂದು ಅಲ್ಲಿಂದ ಹೊರೆಟೆ.


ಗೆಳೆಯರೆ ಹೆಣ್ಣು ಮಾಯೆ, ಅಷ್ಟಾದರೂ ಆಕೆಯನ್ನ ಪೂಜಿಸುವ ವಿಷೇಶವಾದ, ವಿಶಾಲವಾದ ಸಂಸ್ಕೃತಿ ನಮ್ಮದು. ಅದೇ ಹೆಣ್ಣನ್ನ ಭೋಗಿಸುವ ಸಂಕುಚಿತವಾದ ಸಂಸ್ಕೃತಿ ವಿದೇಶಿಗರದು. ಎಂದು ನಾವು ಭಾರತದ ಸಂಸ್ಕೃತಿಗೆ ನಮ್ಮನ್ನು ಪೂರ್ತಿಯಾಗಿ ಸಮರ್ಪಿಸಿಕೊಳ್ಳುವುದಿಲ್ಲವೂ ಅಲ್ಲಿವರೆಗೂ ಅನಾಗರೀಕ ಸಮಾಜದ ಅನಾಗರೀಕ ಪ್ರಜೆಗಳಾಗಿ ಅನಾಗರೀಕ ವರ್ತನೆಗಳ ದಿನೇ ದಿನೇ ನೋಡುತ್ತಾ ಮರುಕ ಪಡುತ್ತಾ ಇರಬೇಕಾಗುತ್ತದೆ. ಇದು ನಾ ಕಂಡ ಸತ್ಯ. 

Comments

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ